
ಸಂಕ್ರಾಂತಿ ಎಂದೊಡನೆ ನೆನಪಾಗುವುದು ಕಬ್ಬು ಎಳ್ಳು ಬೆಲ್ಲ ಮತ್ತು ಅಜ್ಜಿ.
ರೇಷ್ಮೆ ಲಂಗ ಹಾಕಿ, ಮೊಗ್ಗಿನ ಜಡೆ ಹೆಣೆದು, ಕಣ್ಣಿಗೆ ಕಾಡಿಗೆ ಹಣೆಗೆ ದುಂಡನೆಯ ಕುಂಕುಮವಿಟ್ಟು, ಗಲ್ಲಕ್ಕೊಂದು ದೃಷ್ಟಿ ಬೊಟ್ಟಿಟ್ಟ ನಂತರ ಸ್ವಲ್ಪ ಹಿಂದೆ ಸರಿದು ಎಲ್ಲ ಸರಿಯಾಗಿದೆಯಾ ಎಂದು ನಿರುಕಿಸಿ, ಎಷ್ಟು ಮುದ್ದಾಗಿದ್ದೀಯಲ್ಲೇ ಮಹಾಲಕ್ಷ್ಮಿಯ ಹಾಗೆ ಎಂದು ಮುದ್ದಿಡುತ್ತಿದ್ದಳು ಅಜ್ಜಿ.
ಎಳ್ಳು-ಬೆಲ್ಲ, ಬದನೆ ಬಾಳೆ ಹಣ್ಣು ಪುಟ್ಟದೊಂದು ಆಟಿಕೆ ಅರಿಶಿನ ಕುಂಕುಮಗಳನ್ನು ಇಟ್ಟು ಎಲ್ಲರಿಗೂ ಬೀರಿ ಬರಲು ಹೇಳುತ್ತಿದ್ದಳು. ನಾನು ಖುಷಿಯಿಂದ ಹೋಗುತ್ತಿದ್ದೆ. ಅಜ್ಜಿಯ ಮಾತನ್ನೇ ನಿಜವೆಂದು ನಂಬಿ ಪ್ರಂಪಚಕ್ಕೆಲ್ಲಾ ನಾನೇ ಸುಂದರಿಯೇನೋ ಎಂಬಂತೆ ಬೀಗುತ್ತಾ ಹೆಜ್ಜೆಯಿಡುತ್ತಿದ್ದೆ.
ಬೀರಲು ಹೊಟ ಸ್ವಲ್ಪ ಹೊತ್ತು ಇರುತ್ತಿದ್ದ ಉತ್ಸಾಹ, “ಎಲ್ಲರೂ ಎಷ್ಟು ಚೆನ್ನಾಗಿದ್ದೀಯಲ್ಲೇ. . .” ಎಂದು ಹಿಂಡಿದ್ದರಿಂದ ಕೆಂಪಾಗಿ ನೋಯುವ ಗಲ್ಲ, ಭಾರದಿಂದ ಜಗ್ಗುವ ಮೊಗ್ಗಿನ ಜಡೆಯಿಂದಾಗಿ ಅಳಕುವ ಕೂದಲು, ನಡೆಯುವಾಗ ತೊಡರುವ ಲಂಗ, ನೋಯುವ ಕಾಲು ತುಂಬ ಕಿರಿಕಿರಿಯೆನ್ನಿಸುತ್ತಿತ್ತು.
ಹಬ್ಬದ ಹಿಂದಿನ ದಿನಗಳಲ್ಲಂತೂ ಆಕಳ ಸಗಣಿಯಿಂದ ಅಂಗಳ ಸಾರಿಸಿ ಚಂದದ ರಂಗೋಲಿಯಿಟ್ಟು ಚಿಕ್ಕಮ್ಮಂದಿರು ಬಣ್ಣ ತುಂಬುವಾಗ ನಾನೂ ಬಣ್ಣ ತುಂಬುವೆನೆಂದು ಹಠ ಹಿಡಿದ್ದದ್ದು, ಚಿಕ್ಕಮ್ಮ ದಿಡ್ಡಿ ಬಾಗಿಲಿನಲ್ಲಿ ರಂಗೋಲಿ ಹಾಕಲು ಸಿದ್ಧಮಾಡಿಕೊಟ್ಟದ್ದು, ನಾನು ಅಲ್ಲಿಟ್ಟ ಸೊಟ್ಟಪಟ್ಟ ರಂಗೋಲಿಯನ್ನೇ ಎಷ್ಟು ಚೆನ್ನಾಗಿದೆ ಎಂದು ಅಜ್ಜಿ ತಾತ ಬಂದವರಿಗೆಲ್ಲಾ ತೋರಿಸಿದ್ದೇ ತೋರಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ.
ವರುಷಗಳುರುಳಿದಂತೆ ಸಂಕ್ರಾಂತಿಗೆ ಅಜ್ಜಿಯ ಮನೆಗೆ ಹೋಗುವುದು ತಪ್ಪಿತು, ಅಂಗಳದ ರಂಗೋಲಿ ಬಣ್ಣಗಳನ್ನು ಕಂಡು ಬಹಳ ವರ್ಷಗಳಾಯ್ತು, ರಂಗೋಲಿಯ ಮಧ್ಯದಲ್ಲಿ ಚೆಂಡುಹೂ ಹೊತ್ತು ಮೆರೆಯುತ್ತಿದ್ದ ಸಗಣಿಯ ಪಾಂಡವರು ಮರೆಯಾಗಿ ಯಾವುದೋ ಕಾಲವಾಯ್ತು. ಆಗೆಲ್ಲಾ ಕಿರಿಕಿರಿಯೆನ್ನಿಸುತ್ತಿದ್ದ ಎಷ್ಟೋ ಘಟನೆಗಳು ಈಗ ಏಕೋ ಪರಮಾಪ್ತವಾಗಿ ಕಾಡುತ್ತಿವೆ.
ಆದರೆ ಆಗಲೂ ಈಗಲೂ ಸಂಕ್ರಾಂತಿಯಲ್ಲಿ ಬದಲಾಗದೇ ಇರುವುದು ಒಂದೇ, ಎಲ್ಲ ಬಗೆಯಿಂದಲೂ ಹೊಸತನವನ್ನು ತರುವುದು. ಹಳೆಯದನ್ನು ತೊರೆದು ಹೊಸತನಕೆ ತೆರೆದುಕೊಳ್ಳುವುದು. ಹೊಸ ಬೆಳೆ, ಹೊಸ ಬಟ್ಟೆ, ಹೊಸ ಬದುಕು. ಎಲ್ಲ ಹೊಸತು ಹೊಸತು.
ತಮಿಳು ನಾಡು ಮತ್ತು ಆಂಧ್ರದಲ್ಲಿ ಒಂದು ಸಂಪ್ರದಾಯವಿದೆ ಭೋಗಿಯ ದಿನ ಹಳೆಯ ನಿರುಪಯುಕ್ತ ವಸ್ತುಗಳನ್ನೆಲ್ಲ ಒಟ್ಟು ಮಾಡಿ ‘ಭೋಗಿ ಉರಿ’ (ಭೋಗಿ ಮಂಟಲು)ಯಲ್ಲಿ ಹಾಕುವುದು. ತುಂಬಾ ಸಾಂಕೇತಿಕವಾದ ಸಂಪ್ರದಾಯ. ಹಳೆಯ ನಿರುಪಯುಕ್ತ ಹೊರೆಯನ್ನು ಕಳಚಿಟ್ಟು ಮತ್ತೆ ಹೊಸತಿಗೆ ಜಾಗ ಮಾಡಿಕೊಡುವುದು.
ಇಂದು ನಾನೂ ಅದನ್ನೇ ಮಾಡಲು ನಿರ್ಧರಿಸಿರುವೆ. ಹಳೆಯ ನೋವು ನೆನಪುಗಳನ್ನೆಲ್ಲ ಮೂಟೆ ಕಟ್ಟಿ ಮತ್ತೆ ಮೇಲೆದ್ದು ಬರದಂತೆ ತೊರೆದು ಬಿಡುವೆ. ಹೊಸ ಹುರುಪಿನೊಂದಿಗೆ ಬದುಕಿನ ಎಲ್ಲ ಹೊಸತಿಗೆ ತೆರೆದುಕೊಳ್ಳುವೆ.
No comments:
Post a Comment