Wednesday, March 31, 2010

ಹೆಜ್ಜೆ ಮೂಡದ ಹಾದಿ....

ಸೋಡಿಯಂ ವೇಪರ್ ಬೆಳಕಿನಧಾರೆ. ಅಲ್ಲಲ್ಲಿ ಕತ್ತಲು. ದಾರಿಯ ಬದಿಯಲ್ಲೇ ಕೈಯನ್ನೇ ದಿಂಬಾಗಿಸಿ ಲುಂಗಿಯನ್ನೇ ಹೊದ್ದು ಮಲಗಿದ ಜನ. ಊಳಿಡುವ ನಾಯಿಗಳು, ಸುರಿವ ಮಂಜು, ತಣ್ಣನೆಯ ಗಾಳಿ. ಖಾಲಿ ಖಾಲಿ ರಸ್ತೆ.
ಒಂದು ಕ್ಷಣ ಮುಂದಡಿಯಿಡಲು ಹಿಂಜರಿಕೆಯಾಯ್ತು. ಮನೆಯಲ್ಲೇನೋ ಧೈರ್ಯವಾಗಿ ಹೇಳಿ ಬಂದಿದ್ದೆ. ಯಾರೂ ಇಲ್ಲದೆ ಒಬ್ಬಳೇ ಹೋಗುತ್ತೀಯಾ, ವಾಕಿಂಗ್‌ ಹೋದರೆ ಮಗಳನ್ನು ಶಾಲೆಗೆ ಕಳಿಸಲು ಹೊತ್ತಾಗುವುದಿಲ್ಲವೆ ಎಂದೆಲ್ಲ ರಗಳೆ ತೆಗೆದವರಿಗೆ, ಬೇಗ ಎದ್ದು ಹೋಗಿ ವಾಕ್‌ ಮುಗಿಸಿ ಹಿಂದಿರುಗುತ್ತೇನೆ ಎಂದಿದ್ದೆ. ಹಿಂದಿನ ದಿನವೇ ಗೆಳತಿಯರನ್ನು ಕೇಳಿದಾಗ ಮತ್ತದೇ ನಾಳೆ ಬೇಡ ನಾಡಿದ್ದಿನಿಂದ ಹೋಗೋಣ ಎಂದ ಕುಂಟು ನೆಪಕ್ಕೆ ಬೇಸತ್ತು, ಇಲ್ಲ ನಾಳೆ ಬೆಳಿಗ್ಗೆ ನೀವ್ಯಾರೂ ಬರದಿದ್ದರೂ ನಾನೊಬ್ಬಳೇ ವಾಕಿಂಗ್‌ ಹೋಗುತ್ತೇನೆ ಎಂದು ಹೇಳಿಬಿಟ್ಟಿದ್ದೆ.ಇಷ್ಟೆಲ್ಲ ರಗಳೆಗಳ ನಡುವೆ ಹೊರಟವಳು ನಿಜವಾಗಲೂ ರಸ್ತೆಗೆ ಕಾಲಿಟ್ಟಾಗ ಅರೆ ನಿಜವಾಗಲೂ ನೋಡಿದರೆ ಯಾರೂ ಇಲ್ಲ ಒಬ್ಬಳೇ ಸ್ವಲ್ಪ ಅಳುಕಾಯ್ತು. ಆದರೂ ಎಲ್ಲರಿಗೂ ಹೇಳಿದ್ದು ನೆನಪಾಗಿ ಮುಂದಡಿಯಿಟ್ಟೆ.

ತಣ್ಣನೆಯ ಗಾಳಿ ಮೈಗೆ ಕಚಗುಳಿಯಿಟ್ಟಿತು. ಸ್ವಲ್ಪದೂರ ನಡೆದು ಬಂದಾಗ ಪಾಕೆಟ್‌ ಹಾಲಿನ ಲಾರಿ ಅದಾಗ ತಾನೆ ಬಂದಿತ್ತು. ಹಾಲಿನವರು ಅದನ್ನು ಲೆಕ್ಕ ಹಾಕುವ, ಇಳಿಸಿಕೊಳ್ಳುವ ಧಾವಂತದಲ್ಲಿದ್ದರು. ಇನ್ನೊಂದಷ್ಟು ಮುಂದಕ್ಕೆ ಹೋದಾಗ ಪೇಪರ್ ಅದಾಗ ತಾನೆ ಬಂದಿತ್ತು ಪೇಪರಿನವ ಪೇಪರ್ ಬಾಯ್‌ಗಳಿಗೆ ಅದನ್ನು ಎಣಿಸಿ ಕೊಡುತ್ತಿದ್ದ. ಪೇಪರಿನ ಹೊಸ ಇಂಕಿನ ವಾಸನೆಯನ್ನು ಆಘ್ರಾಣಿಸಿ ಮುಂದಕ್ಕೆ ನಡೆದಾಗ ಹಾಡೊಂದನ್ನು ಗುನುಗುತ್ತಾ ಗುಂಪು ಗುಂಪಾಗಿ ಬೀದಿಯ ಕಸಗುಡಿಸುತ್ತಿದ್ದವರು ಎದುರಾದರು.ಅಲ್ಲೇ ಹತ್ತಿರದಲ್ಲೆಲ್ಲೋ ಸಿಕ್ಕ ಹಳೆ ಪೇಪರ್ ಒಣ ಎಲೆಗಳನ್ನು ಒಟ್ಟಾಗಿಸಿ ಲೋಕಾಭಿರಾಮದ ಮಾತನಾಡುತ್ತಾ ಚಳಿ ಕಾಯಿಸುತ್ತಿದ್ದರು. ಅಲ್ಲಿಯೇ ಪಕ್ಕದ ಬಂಡಿಯಲ್ಲಿ ಬಿಸಿಬಿಸಿ ಚಾಯ್‌ ಮಾರುತ್ತಿದ್ದವನ ಸುತ್ತ ನೆರೆದವರು ಸುರ್.. ಸೊರ್... ಎನ್ನುತ್ತಾ ಚಹವನ್ನು ಸವಿಯುತ್ತಿದ್ದರು ಹಲವರು.
ಹಾಗೆ ಮುಂದೆ ಒಳ್ಳೆಯ ಶೂ ತೊಟ್ಟು ವಾಕ್‌ಗೆ ಹೊರಟ ಎಂಭತ್ತರ ಹರೆಯದ ದಂಪತಿಯೊಂದು ಕಾಣಿಸಿತು. ಮತ್ತೊಬ್ಬ ಹುಡುಗ ಅಲ್ಲಿ ಜಾಗ್‌ ಮಾಡುತ್ತಾ ನನ್ನನ್ನು ದಾಟಿ ಹೋದ. ಅಲ್ಲಲ್ಲಿ ನನ್ನಂತೆ ಒಂಟಿಯಾಗಿ ವಾಕ್ಗೆ ಬಂದ ಹಲವರು, ಗುಂಪಾಗಿ ಬಂದ ಹೆಂಗೆಳೆಯರು ಕಾಣತೊಡಗಿದರು.
ಮುಂಜಾನೆಯ ಸೊಬಗು ಮೆಲ್ಲನೆ ಬಿಚ್ಚಿಕೊಳ್ಳತೊಡಗಿತು. ನಾನೂ ಮುಂಜಾನೆಯ ವಾಕ್‌ ಆಸ್ವಾದಿಸ ತೊಡಗಿದೆ. ಹೊರಡುವ ಮೊದಲು ಇದ್ದ ಹಿಂಜರಿಕೆ ಈಗ ಇಲ್ಲವಾಗಿತ್ತು. ಇಷ್ಟು ದಿನ ಈ ಹೊತ್ತಿನಲ್ಲಿ ಯಾರು ಎದ್ದಿರುತ್ತಾರೆ ಎಂದು ಮುಸುಕು ಹೊದ್ದು ಮಲಗುತ್ತಿದ್ದ ನನಗೆ ನಸುಕಿನ ಸವಿಯುಂಡಾಗಿತ್ತು. ಯಾರೂ ಇರುವುದಿಲ್ಲ ನಾನೊಬ್ಬಳೇ ಹೊರಟಿದ್ದೇನೆ ಎಂದುಕೊಂಡಿದ್ದ ನನಗೆ, ನನಗಿಂತ ಮೊದಲು ಹೊರಟಿದ್ದ ಹಲವರು ಸಿಕ್ಕರು.
ಜಗತ್ತೇ ಹಾಗಲ್ಲವೇ, ನಿಜವಾಗಿಯೂ ಹೆಜ್ಜೆ ಮೂಡದ ಹಾದಿಯೆಂಬುದಿಲ್ಲ. ಯಾವುದೇ ಹೊಸ ಹಾದಿ ಹಿಡಿದರೂ ಅಲ್ಲಿ ನಮಗಿಂತ ಮೊದಲು ನಡೆದ ಹೆಜ್ಜೆಗುರುತುಗಳು ಕಾಣಸಿಗುತ್ತವೆ. ಹೆಜ್ಜೆ ಮೂಡದ ಹಾದಿಯಲ್ಲಿ ಪಯಣಿಗಳು ನಾನೊಬ್ಬಳೇ ಅಲ್ಲ.... ಮುಂದಿದ್ದಾರೆ ನೂರಾರು..

Sunday, March 28, 2010

ಭೂ ‘ತಾಪ’


ಪ್ರತಿವರ್ಷ ಮಾರ್ಚ್ ತಿಂಗಳ ಕಡೆಯ ಶನಿವಾರ ಗ್ಲೋಬಲ್ ವಾರ್ಮಿಂಗ್ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಬಹುತೇಕ ಎಲ್ಲ ದೇಶಗಳ ಪ್ರಮುಖ ಪಟ್ಟಣಗಳಲ್ಲಿಯೂ ಪರಿಸರವನ್ನು ಉಳಿಸಲು ಪಣ ತೊಡಲಾಗುತ್ತದೆ. ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಹೆಸರಾದ ಬುರ್ಜ್ ಎ ದುಬೈ ಕೂಡ ಇದರಲ್ಲಿ ಭಾಗಿಯಾಗಲಿದೆ.
ಇದನ್ನು ಬೆಂಬಲಿಸಲೆಂದೇ ವಿಶ್ವದೆಲ್ಲೆಡೆ ಒಂದು ಗಂಟೆ ಸಂಜೆ ೮.೩೦ ರಿಂದ ೯.೩೦ರ ವರೆಗೆ ವಿದ್ಯುತ್ ದೀಪಗಳನ್ನು ಆರಿಸಲಾಗುತ್ತದೆ. ವಿದ್ಯುತ್ ಉಪಕರಣಗಳ ಬಳಕೆಯನ್ನು ನಿಲ್ಲಿಸಲಾಗುತ್ತದೆ. ಈ ಒಂದು ಗಂಟೆ ಕಾಲವನ್ನು ಅರ್ಥ್ ಅವರ್ ಎಂದೇ ಕರೆಯಲಾಗುತ್ತದೆ.
ಬನ್ನಿ ಸ್ವಯಂ ಪ್ರೇರಿತರಾಗಿ ನಾವು ಪರಿಸರ ರಕ್ಷಣೆಯ ಈ ಕಾರ್ಯದಲ್ಲಿ ನಮ್ಮ ಅಳಿಲು ಸೇವೆ ಮಾಡೋಣ. ಭೂ ‘ಬಿಸಿ’ ಇಳಿಸಲು ನೀರಿನ ಬಳಕೆಯನ್ನು ಮಿತಗೊಳಿಸೋಣ. ತರಕಾರಿಗಳನ್ನು ಸೇವಿಸೋಣ. ಈ ಒಂದು ಗಂಟೆ, ನಮ್ಮ ಟಿವಿಯ ರಿಮೋಟ್ ಬದಿಗಿಡೋಣ. ಕಂಪ್ಯೂಟರಿಗೆ ಬಾಯ್ ಹೇಳಿ ದೀಪವಾರಿಸಿ, ಹಳೆಯ ಹಣತೆಯನ್ನು ಹಚ್ಚೋಣ. ಅದರ ಎಣ್ಣೆಯ ಘಮಲು,ಮಂದ ಬೆಳಕಿನ ಸಾಮಿಪ್ಯ ಸವಿಯೋಣ. ಮಿಕ್ಸರ್, ಫ್ರಿಜ್ ಎಸಿಗಳನ್ನು ಆರಿಸಿ ಟೆರೆಸಿನ ತಂಪುಗಾಳಿಗೆ ಮೈಯೊಡ್ಡೋಣ.
ಯಾರಿಗೆ ಗೊತ್ತು ಈ ಒಂದು ತಾಸು ಪರಿಸರದ ಉಳಿವಿನ ಜತೆಗೆ ಮಾತೇ ಮರೆತ ಸಂಬಂಧಗಳಿಗೆ ಮರಳಿ ಬೆಸುಗೆ ಹಾಕಬಲ್ಲದೇನೋ.

Friday, March 26, 2010

ಸಂಕ್ರಾಂತಿ


ಸಂಕ್ರಾಂತಿ ಎಂದೊಡನೆ ನೆನಪಾಗುವುದು ಕಬ್ಬು ಎಳ್ಳು ಬೆಲ್ಲ ಮತ್ತು ಅಜ್ಜಿ.
ರೇಷ್ಮೆ ಲಂಗ ಹಾಕಿ, ಮೊಗ್ಗಿನ ಜಡೆ ಹೆಣೆದು, ಕಣ್ಣಿಗೆ ಕಾಡಿಗೆ ಹಣೆಗೆ ದುಂಡನೆಯ ಕುಂಕುಮವಿಟ್ಟು, ಗಲ್ಲಕ್ಕೊಂದು ದೃಷ್ಟಿ ಬೊಟ್ಟಿಟ್ಟ ನಂತರ ಸ್ವಲ್ಪ ಹಿಂದೆ ಸರಿದು ಎಲ್ಲ ಸರಿಯಾಗಿದೆಯಾ ಎಂದು ನಿರುಕಿಸಿ, ಎಷ್ಟು ಮುದ್ದಾಗಿದ್ದೀಯಲ್ಲೇ ಮಹಾಲಕ್ಷ್ಮಿಯ ಹಾಗೆ ಎಂದು ಮುದ್ದಿಡುತ್ತಿದ್ದಳು ಅಜ್ಜಿ.
ಎಳ್ಳು-ಬೆಲ್ಲ, ಬದನೆ ಬಾಳೆ ಹಣ್ಣು ಪುಟ್ಟದೊಂದು ಆಟಿಕೆ ಅರಿಶಿನ ಕುಂಕುಮಗಳನ್ನು ಇಟ್ಟು ಎಲ್ಲರಿಗೂ ಬೀರಿ ಬರಲು ಹೇಳುತ್ತಿದ್ದಳು. ನಾನು ಖುಷಿಯಿಂದ ಹೋಗುತ್ತಿದ್ದೆ. ಅಜ್ಜಿಯ ಮಾತನ್ನೇ ನಿಜವೆಂದು ನಂಬಿ ಪ್ರಂಪಚಕ್ಕೆಲ್ಲಾ ನಾನೇ ಸುಂದರಿಯೇನೋ ಎಂಬಂತೆ ಬೀಗುತ್ತಾ ಹೆಜ್ಜೆಯಿಡುತ್ತಿದ್ದೆ.
ಬೀರಲು ಹೊಟ ಸ್ವಲ್ಪ ಹೊತ್ತು ಇರುತ್ತಿದ್ದ ಉತ್ಸಾಹ, “ಎಲ್ಲರೂ ಎಷ್ಟು ಚೆನ್ನಾಗಿದ್ದೀಯಲ್ಲೇ. . .” ಎಂದು ಹಿಂಡಿದ್ದರಿಂದ ಕೆಂಪಾಗಿ ನೋಯುವ ಗಲ್ಲ, ಭಾರದಿಂದ ಜಗ್ಗುವ ಮೊಗ್ಗಿನ ಜಡೆಯಿಂದಾಗಿ ಅಳಕುವ ಕೂದಲು, ನಡೆಯುವಾಗ ತೊಡರುವ ಲಂಗ, ನೋಯುವ ಕಾಲು ತುಂಬ ಕಿರಿಕಿರಿಯೆನ್ನಿಸುತ್ತಿತ್ತು.
ಹಬ್ಬದ ಹಿಂದಿನ ದಿನಗಳಲ್ಲಂತೂ ಆಕಳ ಸಗಣಿಯಿಂದ ಅಂಗಳ ಸಾರಿಸಿ ಚಂದದ ರಂಗೋಲಿಯಿಟ್ಟು ಚಿಕ್ಕಮ್ಮಂದಿರು ಬಣ್ಣ ತುಂಬುವಾಗ ನಾನೂ ಬಣ್ಣ ತುಂಬುವೆನೆಂದು ಹಠ ಹಿಡಿದ್ದದ್ದು, ಚಿಕ್ಕಮ್ಮ ದಿಡ್ಡಿ ಬಾಗಿಲಿನಲ್ಲಿ ರಂಗೋಲಿ ಹಾಕಲು ಸಿದ್ಧಮಾಡಿಕೊಟ್ಟದ್ದು, ನಾನು ಅಲ್ಲಿಟ್ಟ ಸೊಟ್ಟಪಟ್ಟ ರಂಗೋಲಿಯನ್ನೇ ಎಷ್ಟು ಚೆನ್ನಾಗಿದೆ ಎಂದು ಅಜ್ಜಿ ತಾತ ಬಂದವರಿಗೆಲ್ಲಾ ತೋರಿಸಿದ್ದೇ ತೋರಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ.
ವರುಷಗಳುರುಳಿದಂತೆ ಸಂಕ್ರಾಂತಿಗೆ ಅಜ್ಜಿಯ ಮನೆಗೆ ಹೋಗುವುದು ತಪ್ಪಿತು, ಅಂಗಳದ ರಂಗೋಲಿ ಬಣ್ಣಗಳನ್ನು ಕಂಡು ಬಹಳ ವರ್ಷಗಳಾಯ್ತು, ರಂಗೋಲಿಯ ಮಧ್ಯದಲ್ಲಿ ಚೆಂಡುಹೂ ಹೊತ್ತು ಮೆರೆಯುತ್ತಿದ್ದ ಸಗಣಿಯ ಪಾಂಡವರು ಮರೆಯಾಗಿ ಯಾವುದೋ ಕಾಲವಾಯ್ತು. ಆಗೆಲ್ಲಾ ಕಿರಿಕಿರಿಯೆನ್ನಿಸುತ್ತಿದ್ದ ಎಷ್ಟೋ ಘಟನೆಗಳು ಈಗ ಏಕೋ ಪರಮಾಪ್ತವಾಗಿ ಕಾಡುತ್ತಿವೆ.
ಆದರೆ ಆಗಲೂ ಈಗಲೂ ಸಂಕ್ರಾಂತಿಯಲ್ಲಿ ಬದಲಾಗದೇ ಇರುವುದು ಒಂದೇ, ಎಲ್ಲ ಬಗೆಯಿಂದಲೂ ಹೊಸತನವನ್ನು ತರುವುದು. ಹಳೆಯದನ್ನು ತೊರೆದು ಹೊಸತನಕೆ ತೆರೆದುಕೊಳ್ಳುವುದು. ಹೊಸ ಬೆಳೆ, ಹೊಸ ಬಟ್ಟೆ, ಹೊಸ ಬದುಕು. ಎಲ್ಲ ಹೊಸತು ಹೊಸತು.
ತಮಿಳು ನಾಡು ಮತ್ತು ಆಂಧ್ರದಲ್ಲಿ ಒಂದು ಸಂಪ್ರದಾಯವಿದೆ ಭೋಗಿಯ ದಿನ ಹಳೆಯ ನಿರುಪಯುಕ್ತ ವಸ್ತುಗಳನ್ನೆಲ್ಲ ಒಟ್ಟು ಮಾಡಿ ‘ಭೋಗಿ ಉರಿ’ (ಭೋಗಿ ಮಂಟಲು)ಯಲ್ಲಿ ಹಾಕುವುದು. ತುಂಬಾ ಸಾಂಕೇತಿಕವಾದ ಸಂಪ್ರದಾಯ. ಹಳೆಯ ನಿರುಪಯುಕ್ತ ಹೊರೆಯನ್ನು ಕಳಚಿಟ್ಟು ಮತ್ತೆ ಹೊಸತಿಗೆ ಜಾಗ ಮಾಡಿಕೊಡುವುದು.
ಇಂದು ನಾನೂ ಅದನ್ನೇ ಮಾಡಲು ನಿರ್ಧರಿಸಿರುವೆ. ಹಳೆಯ ನೋವು ನೆನಪುಗಳನ್ನೆಲ್ಲ ಮೂಟೆ ಕಟ್ಟಿ ಮತ್ತೆ ಮೇಲೆದ್ದು ಬರದಂತೆ ತೊರೆದು ಬಿಡುವೆ. ಹೊಸ ಹುರುಪಿನೊಂದಿಗೆ ಬದುಕಿನ ಎಲ್ಲ ಹೊಸತಿಗೆ ತೆರೆದುಕೊಳ್ಳುವೆ.

Thursday, March 25, 2010

ಒಂದು ಹೋಳು ಅಡಿಕೆ॒

ಮೊದಲೇ ಧೂಳು ತುಂಬಿದ ಮಣ್ಣು ಹಾದಿ. ನೆತ್ತಿ ಸುಡುವ ಉರಿ ಬಿಸಿಲು. ಕೈಯಲ್ಲಿ ತರಕಾರಿಯ ಚೀಲ ಹಿಡಿದು ಮನೆಯ ದಾರಿ ಹಿಡಿದವಳಿಗೆ ಅದೇನಾಯ್ತೋ ಗೊತ್ತಿಲ್ಲ, ಕೆಮ್ಮು ಅಲೆಅಲೆಯಾಗಿ ಬರತೊಡಗಿತು. ಏನು ಮಾಡಿದರೂ ಕಡಿಮೆಯಾಗುತ್ತಿಲ್ಲ. ಕೆಮ್ಮಿ ಕೆಮ್ಮಿ ಕಣ್ಣಲ್ಲಿ ನೀರು ಸುರಿಯತೊಡಗಿತು. ನೆತ್ತಿಗೆ ಹತ್ತಿತ್ತೋ ಏನೋ ಉಸಿರೆಳೆದುಕೊಳ್ಳಲೂ ಕಷ್ಟವಾಗುವಂತಹ ಕೆಮ್ಮು. ನಿಲ್ಲಲೂ ಆಗುತ್ತಿಲ್ಲ. ಹತ್ತಿರದಲ್ಲೆಲ್ಲೂ ಮನೆಯಿಲ್ಲ. ಸುತ್ತಮುತ್ತಲಿನವರು ನನ್ನೆಡೆಗೆ ಒಂದು ವಿಚಿತ್ರ ನೋಟವೆಸೆದು ನಡೆದು ಬಿಟ್ಟರು. ಆ ಹೊತ್ತಿಗೆ ಅದೆಲ್ಲಿದ್ದನೋ ಪುಟ್ಟ ಹುಡುಗನೊಬ್ಬ ಬಂದು ಆಂಟಿ ನಿಮ್ಮ ಹತ್ತಿರ ನೀರಿಲ್ವಾ ಕುಡೀರಿ ಕಡಿಮೆಯಾಗುತ್ತೆ ಎಂದ. ಕೆಮ್ಮುತ್ತಲೇ ಇಲ್ಲವೆಂದು ತಲೆಯಾಡಿಸಿದೆ. ತಕ್ಷಣ ಓಡಿ ಹೋದ. ಆ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ.
ಹಾಗೆಯೇ ಹತ್ತು ಹೆಜ್ಜೆ ಹೋದವಳಿಗೆ ನಡೆಯಲೂ ಆಗದೆ ರಸ್ತೆಯ ಬದಿಗೆ ಸರಿದು ನಿಂತು ಬಿಟ್ಟೆ. ನಿಲ್ಲಲು ನೆರಳೂ ಇಲ್ಲ. ಇತ್ತ ಏನು ಮಾಡಿದರೂ ಕೆಮ್ಮು ನಿಲ್ಲುತ್ತಿಲ್ಲ. ಕೆಮ್ಮಿಕೆಮ್ಮಿ ಎದೆನೋವು ಬಂದುಬಿಟ್ಟಿತು. ಅಷ್ಟರಲ್ಲೇ ಓಡುತ್ತಾ ಬಂದ ಆ ಪುಟ್ಟ ಹುಡುಗ. ತೇಕುತ್ತಲೇ “ಆಂಟಿ ಇದನ್ನು ತಿನ್ನಿ ಕಡಿಮೆಯಾಗತ್ತೆ” ಎಂದು ಕೈಚಾಚಿದ. ಅವನ ಪುಟ್ಟ ಕೈಯಲ್ಲಿ ಅಡಿಕೆ ಹೋಳುಗಳಿದ್ದವು. ನಾನು ತೆಗೆದು ಕೊಂಡು ಬಾಯಿಗೆ ಹಾಕಿಕೊಂಡ ಮೇಲೆ “ಇನ್ನ ಕಡಿಮೆಯಾಗತ್ತೆ ಆಂಟಿ. ಕೆಮ್ಮು ಬಂದಾಗ ಅಡಿಕೆ ಬಾಯಿಗೆ ಹಾಕ್ಕೊಂಡ್ರೆ ಕಡಿಮೆಯಾಗತ್ತೆ ಅಂತ ಅಜ್ಜಿ ಹೇಳಿದ್ಲು. ಆದ್ರೆ ಒಂದ್ಸಾರಿ ಡಾಕ್ಟ್ರಿಗೆ ತೋರಿಸಿ..” ಎಂದವನೇ ನನ್ನ ಉತ್ತರಕ್ಕೂ ಕಾಯದೇ ಹೊರಟುಬಿಟ್ಟ.
ಆ ಪುಟ್ಟ ಹುಡುಗನಿಗೆ ಒಂದು ಥ್ಯಾಂಕ್ಸ್ ಹೇಳಲೂ ಆಗಲಿಲ್ಲವಲ್ಲ ಎನ್ನುವ ಕೊರಗು ಇಂದಿಗೂ ಕಾಡುತ್ತಿದೆ. “ಪುಟ್ಟಾ ತುಂಬ ತುಂಬ ಥ್ಯಾಂಕ್ಸ್. ಬರಿ ಒಂದು ಅಡಿಕೆ ಹೋಳಿಗಾಗಿ ಅಲ್ಲ. ನೀ ಮೆರೆದ ಮಾನವತ್ವಕ್ಕಾಗಿ.”
ಸಂಬಂಧಗಳೆಲ್ಲ ತೆಳುವಾಗಿ, ಪ್ರತಿ ವಿಷಯವೂ ನಾನು, ನನ್ನಿಂದ, ನನಗಾಗಿ, ನನಗೇನು ಎಂದು ‘ನಾನು’ ಸುತ್ತಲೇ ಸುತ್ತುವ ಕಾಲಘಟ್ಟದಲ್ಲಿ, ಪುಟ್ಟ ಅಡಿಕೆ ಹೋಳಿನಂತಹ ಘಟನೆಗಳು ನಮ್ಮ ಆಶಾವಾದವನ್ನು ಚಿಗುರಿಸುತ್ತವೆ.

vismaya

ಗ್ರಹಣ ಇಷ್ಟು ಅಂದವಾಗಿರಬಹುದೆಂದು ಅಂದುಕೊಂಡೇ ಇರಲಿಲ್ಲ. ಶತಮಾನದ ಸುದೀರ್ಘ ಗ್ರಹಣ ಎಂದೇ ಎಲ್ಲರ ಗಮನ ಸೆಳೆದಿದ್ದ ಇದರ ಬಗ್ಗೆ ಅನೇಕರಿಗೆ ಆತಂಕ, ಬಹುತೇಕರಿಗೆ ಕುತೂಹಲ.
ಗ್ರಹಣ ನೋಡ ಹೊರಟವರಿಗೆ ಎದುರಾದದ್ದು ಖಾಲಿ ಖಾಲಿ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟುಗಳು, ಅರ್ಧಬಾಗಿಲು ತೆರೆದಿದ್ದ ಹೊಟೇಲುಗಳು.
ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗಾಗಿ ಅನುಕೂಲ ಮಾಡಿಕೊಟ್ಟಿದ್ದ ಬಾಹ್ಯಾಕಾಶ ವೀಕ್ಷಣಾ ಸಂಸ್ಥೆಯನ್ನ ತಲುಪಿದ್ದೇ ತಡ ಮತ್ತೊಂದು ಮಾಯಾಲೋಕವೇ ತೆರೆದುಕೊಂಡಿತ್ತು.
ಗ್ರಹಣವನ್ನು ನೋಡಲು ಎರಡು ಮೂರು ವರ್ಷದ ಮಕ್ಕಳನ್ನೂ ಕರೆತಂದಿದ್ದ ತಾಯಂದಿರಿಂದ ಹಿಡಿದು, ಎಂಭತ್ತರ ಹರೆಯದವರವರೆಗಿನ ಎಲ್ಲ ವಯೋಮಾನದವರೂ ಈ ಕೌತುಕ ನೋಡಲು ನೆರೆದಿದ್ದರು.
ಗ್ರಹಣ ನೋಡಲು ಅವರಿವರಿಂದ ಚಾಳೀಸು ಪಡೆದು ನೋಡಿದ್ದಾಯ್ತು. ಹಾಗೆಯೇ ಎಲ್ಲರಿಗೂ ಬರಿಗಣ್ಣಿನಲ್ಲಿ ನೋಡಲು ಸಾಧ್ಯವಾಗುವಂತೆ ಗ್ರಹಣದ ಪ್ರತಿಫಲನದ ವ್ಯವಸ್ಥೆ ಮಾಡಿದ್ದರು ಸಂಸ್ಥೆಯವರು ಅದನ್ನೂ ನಿರುಕಿಸಿದ್ದಾಯ್ತು. ಇಷ್ಟಕ್ಕೇ ಸಂಭ್ರಮಿಸುತ್ತಿದ್ದ ನಮಗೆ ಪಕ್ಕದಲ್ಲಿದ್ದ ಹಲವರು ಬೋರ್ಡ್ ಒಂದರ ಮೇಲೆ ಬಿಳಿ ಕಾಗದ ಹಿಡಿದು ಏನನ್ನೋ ನೋಡುತ್ತಿದ್ದುದು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅಲ್ಲಿಯೂ ಹಾಳೆಯ ಮೇಲೆ ಸೂಜಿ ಮೊನೆಯಿಂದ ಹಾಕಲಾಗಿದ್ದ ಪುಟ್ಟ ತೂತಿನಿಂದ ಹಾದು ಬಂದ ಕಿರಣವೊಂದು ಸೂರ್ಯನ ಗ್ರಹಣದ ಬಿಂಬವನ್ನು ಹೊತ್ತು ತಂದಿತ್ತು.
ಅಲ್ಲಿಗೆ ಬಂದ ಸ್ವಯಂ ಸೇವಕಿ ನೀವೀಗ ಮಾಡುತ್ತಿರುವ ಪ್ರಯೋಗವನ್ನು ಪ್ರಕೃತಿಯೇ ಮಾಡಿದೆ ಬಂದು ನೋಡಿ ಎಂದದ್ದೇ ಅವಳ ಹಿಂದೆ ಹೊರಟೆವು. ಅಲ್ಲಿ ಹೋದಾಗ ಕಂಡದ್ದು ಮಾತ್ರ ಪ್ರಕೃತಿಯ ಕೌತುಕ. ಮರದ ದಟ್ಟ ನೆರಳನ್ನು ಸೀಳಿಕೊಂಡು ಬಂದ ಪ್ರತಿ ಕಿರಣವೂ ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿತ್ತು. ವಾಹ್ ಅದೊಂದು ಅದ್ಭುತ ನೋಟ.
ಅಲ್ಲಿಂದ ತಿರುಗಿ ಹೊರಟಾಗ ದಾರಿಯುದ್ದಕ್ಕೂ ಇದ್ದ ಮರದ ನೆರಳನ್ನು ಸೀಳಿಕೊಂಡು ಬಂದ ಕಿರಣಗಳು ಗ್ರಹಣಗ್ರಸ್ತ ಸೂರ‍್ಯನ ಬಿಂಬವನ್ನು ಮೂಡಿಸಿದ್ದವು.
ಇಂತಹ ಸುಂದರ ನೋಟವನ್ನು ನೋಡುವ ಅವಕಾಶವನ್ನು ಕಳೆದು ಕೊಂಡು ಮನೆಯಲ್ಲಿ ಅಡಗಿ ಕುಳಿತಿರುವಿರಲ್ಲಾ ಎಂದು ಎಲ್ಲರನ್ನೂ ನೋಡಿ ನಗುತ್ತಿರುವಂತೆ ಭಾಸವಾಗುತ್ತಿತ್ತು.

Wednesday, March 24, 2010

ಹಾದಿ


ಹತ್ತಿರದಲ್ಲೆಲ್ಲೋ ಹೋಗ ಬೇಕಿತ್ತು ಆಟೋಗಾಗಿ ಕಾಯುತ್ತಿದ್ದೆವು ಸಾಕಷ್ಟು ಖಾಲಿ ಆಟೋಗಳು ಬರುತ್ತಿದ್ದರೂ ಕೂಡಾ ನಾವು ಕೇಳಿದ ಪ್ರತಿ ಆಟೋ ಬರುವುದಿಲ್ಲವೆಂದೇ ಹೇಳುತ್ತಿತ್ತು. ಹೀಗೇಕೆ ಎಂದು ಯೋಚಿಸುವಂತಾಯ್ತು. ಆದರೆ ಅದೇ ರೋಡಿನ ಮತ್ತೊಂದು ಬದಿಗೆ ಹೋದಾಗ ನಾವು ಕೇಳಿದ ಮೊದಲ ಆಟೋದವನೇ ಹೋಗ ಬೇಕಾದ ಸ್ಥಳಕ್ಕೆ ಬರಲೊಪ್ಪಿದ. ಇದು ಮ್ಯಾನೇಜ್ಮೆಂಟ್ನ ಮೊದಲ ಪಾಠ. ಗುರಿಯನ್ನು ತಲುಪಲಾಗದಿದ್ದರೆ ದೋಷ ಗುರಿಯದ್ದಲ್ಲ ನಾವು ಹಿಡಿದ ಹಾದಿಯದ್ದು.
ಜೀವನವೂ ಹೀಗೆಯೇ ಅಲ್ಲಿ ಹಲವು ಬಾರಿ ನಿರಾಕರಣೆಗಳನ್ನು, ಸಮಸ್ಯೆಗಳನ್ನು ಎದುರಿಸ ಬೇಕಾಗಿ ಬರುತ್ತದೆ. ನನಗೇಕೆ ಹೀಗೆ ಎಂದು ಎದೆಗುಂದುವಂತಾಗುತ್ತದೆ. ಈ ಹಂತದಲ್ಲೇ ಸ್ವಾನುಕಂಪ ಇಣುಕಿನೋಡುತ್ತದೆ. ಒಂದು ಬಾರಿ ಇದರ ಹಿಡಿತಕ್ಕೆ ಬಂದೆವೆಂದೆರೆ ಮುಗಿಯಿತು ನಮ್ಮ ಎದುರಿಗಿದ್ದ ಹೆದ್ದಾರಿಯೂ ನಮಗೆ ಕಾಣಿಸುವುದಿಲ್ಲ.
ಏನು ಮಾಡಿದರೂ ಸರಿಯಾದ ಫಲಿತಾಂಶ ದೊರೆಯುತ್ತಿಲ್ಲ ಎನಿಸಿದಾಗ ನಾವು ಹಿಡಿದ ಹಾದಿ ನಮ್ಮನ್ನು ನಮ್ಮ ಗುರಿಯೆಡೆಗೆ ನಡೆಸುತ್ತದೆಯೇ ಎಂಬುದನ್ನು ಒಂದು ಬಾರಿ ಅವಲೋಕಿಸಿಕೊಳ್ಳಬೇಕು. ಗುರಿ ಸ್ಪಷ್ಟವಿದ್ದಾಗಲೇ ಗುರಿ ಸಾಧಿಸುವ ಹಾದಿ ಸಿಗುವುದು ಸುಗಮವಾಗುತ್ತದೆ.
ಎಲ್ಲರ ಬದುಕಿನಲ್ಲೂ ಒಂದೇ ಬಗೆಯ ಘಟನೆಗಳು ನಡೆಯುತ್ತವೆ. ಆದರೆ ನಾವು ಅದಕ್ಕೆ ನೀಡುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ. ಅದು ಘಟನೆಯ ಪರಿಣಾಮವನ್ನು ನಿರ್ಧರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ರೈಲು ಗಾಡಿಯಿಂದ ಹೊರದಬ್ಬಿದಾಗ ಅವರು ಆ ಘಟನೆಗೆ ಪ್ರತಿಕ್ರಿಯಿಸಿದ ರೀತಿಯಿಂದಲೇ ಆ ಘಟನೆ ಚರಿತಾರ್ಥವಾಯಿತು. ವರ್ಣವಿಬೇಧ ನೀತಿಯ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು.
ಪ್ರತಿಯೊಬ್ಬರ ಜೀವನದಲ್ಲಿ ನಡೆಯ ಬಹುದಾದ ಅತಿ ಸಾಮಾನ್ಯ ಘಟನೆ, ಗಾಂಧೀಜಿಯವರು ಪ್ರತಿಕ್ರಿಯಿಸಿದ ರೀತಿಯಿಂದಾಗಿ ಚರಿತಾರ್ಥವಾಯಿತು.
picture source internet: wallpapermania.freehostia.com/windows.html

ಹಲವು ದಿನಗಳ ಕೆಳಗೆ ಅತ್ಯಂತ ಆಕರ್ಷಕ ಸ್ಕೂಟಿ ಮಾದರಿಯ ವಾಹನವೊಂದನ್ನು ನೋಡಿದೆ. ತುಂಬ ಚೆನ್ನಾಗಿತ್ತು. ಯುವತಿಯೊಬ್ಬಳು ಅತ್ಯಂತ ಸರಾಗವಾಗಿ ಅದನ್ನು ನಡೆಸಿಕೊಂಡು ಸುಯ್ಯೆಂದು ಹೊರಟು ಬಿಟ್ಟಳು. ಹೆಚ್ಚು ಗಮನಿಸಲು ಆಗಲೇ ಇಲ್ಲ. ಆದರೆ ಒಂದು ಅಂಶ ಮಾತ್ರ ನನ್ನ ಗಮನ ಸೆಳೆಯಿತು. ಅದೆಂದೆರೆ ಅದಕ್ಕೆ ಹೆಡ್ಲೈಟ್ ಇಲ್ಲದೇ ಇದ್ದದ್ದು. ದಾರಿಯಲ್ಲಿ ನಡೆದು ಬರುತ್ತಿರುವಾಗಲೂ ಅದು ನನ್ನನ್ನು ಕಾಡುತ್ತಲೇ ಇತ್ತು. ಅರೆ ಹೆಡ್ಲೈಟಿಲ್ಲದ ಗಾಡಿಯಾ ಹೇಗೆ ಸಾಧ್ಯ. ಅಥವಾ ಹ್ಯಾಂಡಲ್ ಬಳಿ ಹೆಡ್ಲೈಟ್ಗೆ ಕವರ್ ಹಾಕಲಾಗಿದೆಯಾ ಹೇಗೆ? ತೆರೆ ಸರಿದಂತೆ ಅದು ತನ್ನಷ್ಟಕ್ಕೆ ತಾನೇ ಸರಿಯುತ್ತದಾ? ರಾತ್ರಿಯಾದರೆ ಹೇಗೆ ಓಡಿಸುತ್ತಾರೆ. ಹೀಗೆ ಹತ್ತಾರು ಕೋನಗಳಲ್ಲಿ ಆಲೋಚಿಸಿದರೂ ನನ್ನ ಪ್ರಶ್ನೆಗೆ ಉತ್ತರ ಹೊಳೆಯಲೇ ಇಲ್ಲ. ನನ್ನ ಮುಂದೆ ಅಂತಹುದ್ದೇ ಮತ್ತೊಂದು ವಾಹನ ಹಾದು ಹೋದಾಗಲೂ ನನಗೆ ಹೆಡ್ಲೈಟ್ ಕಾಣಿಸಲಿಲ್ಲ. ಆ ಹೆಡ್ಲೈಟ್ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿತು. ಆಫೀಸಿಗೆ ಹೋದ ತಕ್ಷಣ ಅದರ ಬಗ್ಗೆ ಗೂಗಲ್ ಮಾಡಬೇಕೆಂದವಳಿಗೆ ಎಡೆಬಿಡದ ಕೆಲಸದ ನಡುವೆ ಮರೆತೇ ಹೋಯ್ತು.
ಇನ್ನೊಂದು ದಿನ ನಡೆಯುತ್ತಾ ಹೋಗುತ್ತಿದ್ದವಳ ಕಣ್ಣು ಹಾದು ಹೋದ ಆ ಸ್ಕೂಟಿ ಮಾದರಿಯ ವಾಹನದ ಮೇಲೆ ಅಯಾಚಿತವಾಗಿ ಬಿತ್ತು. ಹಾಗೆ ಬಿದ್ದಾಗಲೇ ನನಗೆ ಅಲ್ಲಿ ಹ್ಯಾಂಡಲ್ನ ಕೆಳಭಾಗದ ಗಾಲಿಯ ಮೇಲ್ಭಾಗದ ಮೇಲೆ ಥಳಥಳನೇ ಹೊಳೆಯುತ್ತಿದ್ದ ದೀಪ ಕಣ್ಣಿಗೆ ಬಿತ್ತು. ಅರೆ ಇದೇ ಅಲ್ಲವಾ ನನ್ನನ್ನು ಕಾಡುತ್ತಿದ್ದ ದೀಪ ಎಂದು ಅಚ್ಚರಿಯಾಯ್ತು.
ಸ್ಕೂಟಿ, ಕೆನೆಟಿಕ್ ಹೊಂಡಾಗಳನ್ನೇ ನೋಡಿ ಅಭ್ಯಾಸವಾಗಿದ್ದ ನನ್ನ ಕಣ್ಣು ಹ್ಯಾಂಡಲ್ ಬಳಿಯೇ ಹೆಡ್ಲೈಟನ್ನು ಹುಡುಕಿ ಸುಮ್ಮನಾಗಿ ಬಿಟ್ಟಿತ್ತು. ಅಷ್ಟೇ ಅಲ್ಲದೇ ಅರೆ ಈ ಗಾಡಿಗೆ ದೀಪವೇ ಇಲ್ಲವಲ್ಲ ಎನ್ನುವ ಭಾವವನ್ನೂ ಮೆದುಳಿಗೆ ಹೊತ್ತು ಹಾಕಿತ್ತು. ದೀಪವನ್ನು ಹುಡುಕುವ ತವಕ ಹುಟ್ಟಿತು. ಕಳೆದದ್ದನ್ನು ಹುಡುಕುವ ಆತುರದಲ್ಲಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ಹುಡುಕಿ ಸುಮ್ಮನಾಗಿಬಿಟ್ಟಿತು. ಆದರೆ ಇನ್ನೊಂದು ಬಾರಿ ನೋಡಿದಾಗ ಯಾವುದೇ ಧಾವಂತವಿರಲಿಲ್ಲ. ಅಲ್ಲದೇ ಕಣ್ಣಿಗೂ ಪೂರ್ವಗ್ರಹಗಳಿರಲಿಲ್ಲ. ಹಾಗಾಗಿ ಅಲ್ಲಿಯೇ ಇದ್ದ ದೀಪ ಕಣ್ಣಿಗೆ ಬಿತ್ತು.
ಈ ಪುಟ್ಟ ಘಟನೆ ನನಗೆ ಜೀವನದ ಅತಿದೊಡ್ಡ ಪಾಠವನ್ನೇ ಕಲಿಸಿಕೊಟ್ಟಿತು. ನಮ್ಮ ದೇಹ ಮತ್ತು ಮನಸ್ಸುಗಳ ನಡವಳಿಕೆಯಂತೆ ನಮ್ಮ ಯೋಚನೆಗಳೂ ಕೂಡ ಒಂದೇ ಬಗೆಯ ಯೋಚನಾ ಧಾಟಿಗೆ ಒಗ್ಗಿಕೊಂಡು ಬಿಡುತ್ತವೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾದಾಗಲೂ ಒಂದೇ ಬಗೆಯ ಯಾಂತ್ರಿಕ, ಸಿದ್ಧ ಉತ್ತರ ಮತ್ತು ಪ್ರತಿಕ್ರಿಯೆಗಳನ್ನೇ ನೀಡುತ್ತವೆ. ಅದರಲ್ಲಿರುವ ಹೊಸ ಉತ್ತರಗಳು ಮತ್ತು ಸಾಧ್ಯತೆಗಳು ಹೊಳಹುಗಳನ್ನು ಗುರುತಿಸಲಾಗುವುದೇ ಇಲ್ಲ. ಹೊಸದನ್ನೇನಾದರೂ ಮಾಡಬೇಕೆಂದರೂ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕೆಂದರೂ ಕೂಡ ಈ ಸಿದ್ಧ ಮಾದರಿಯ ಆಲೋಚನೆಯ ಸುಳಿಯನ್ನು ಮೆಟ್ಟಿ ಬರಬೇಕು. ಹಾಂ ಅದೇ ಔಟ್ ಆಫ್ ದ ಬಾಕ್ಸ್ ಥಿಂಕಿಂಗ್ ನಮ್ಮದಾಗಬೇಕು. ಹಾಗಾದಾಗಲೇ ಹೊಸ ಅವಕಾಶಗಳು ಕಾಣುತ್ತವೆ ಮತ್ತು ಯಶಸ್ಸು ನಮ್ಮದಾಗುತ್ತದೆ.

Monday, March 22, 2010

baduku


ಬದುಕು ಅಧ್ಬುತವಾಗಿ ಸಾಗುತ್ತಿದೆ. ಜಗತ್ತಿನೆಲ್ಲ ಸೌಖ್ಯವೂ ನನ್ನಡೆಯಿದೆ ಎಂದುಕೊಂಡು ತುಸು ರಿಲಾಕ್ಸ್ ಆದಾಗಲೇ ಬದುಕು ಅತ್ಯಂತ ಅಚ್ಚರಿಯ ಆಘಾತಗಳನ್ನು ನೀಡುತ್ತದೆ. ಅದು ಎತ್ತಿ ಒಗೆಯುವ ರಭಸಕ್ಕೆ ಬದುಕು ಛಿದ್ರವಾಗುತ್ತದೆ. ಈ ಹಂತದಲ್ಲಿ ದುಸ್ತರವೆನ್ನಿಸುವ ಇದೇ ಬದುಕು ಹತ್ತು ಹಲವು ಹಾದಿಗಳನ್ನು ತೋರಿಸಿ ಕೈಹಿಡಿದೆತ್ತಿ, ತುಣುಕುಗಳನ್ನು ಜೋಡಿಸಿ ಮತ್ತೆ ಹೊಸ ಬದುಕನ್ನು ಕಟ್ಟುವ ಚೈತನ್ಯವನ್ನೂ ಮೊಗೆಮೊಗೆದು ಕೊಡುವ ಕರುನಾಳುವಾಗುತ್ತದೆ. ಇಲ್ಲಿ ನಮಲ್ಲಿರಬೇಕಾದದ್ದು ಒಂದೆ ಅಪಾರ ತಾಳ್ಮೆ, ಬೂದಿಯಿಂದಲೂ ಎದ್ದುಬರುವ ಫೀನಿಕ್ಸ್‌ನ ಬದುಕು ಕಟ್ಟಿಕೊಳ್ಳುವ ಛಲ ಮತ್ತು ಅಪಾರ ಜೀವನ ಪ್ರಿತಿ.
 
Designed by Lena